ಡಾ.ಶಶಿ ತರೂರ್ ಮಲಯಾಳಂ:ശശി തരൂ൪,ಹಿಂದಿ:शशि तरूर (ಜನನ ೯ ಮಾರ್ಚ್ ೧೯೫೬ ) ಕೇರಳದ ತ್ರಿವೇಂದ್ರಮ್ ಕ್ಷೇತ್ರದಿಂದ ಆರಿಸಿ ಬಂದ ಭಾರತದ ಸಂಸತ್ತಿನ ಸದಸ್ಯರಾಗಿದ್ದಾರೆ ಮತ್ತು ಈಗ ಭಾರತದ ವಿದೇಶಾಂಗ ಖಾತೆಯ ರಾಜ್ಯ ಸಚಿವರಾಗಿದ್ದಾರೆ. ಇದಕ್ಕೂ ಮುನ್ನ, ೨೦೦೨ರಿಂದ ೨೦೦೭ರವರೆಗೆ,ಯುನೈಟೆಡ್ ನೇಷನ್ಸ್ ನ ಪ್ರಧಾನ ಕಾರ್ಯದರ್ಶಿಯಾಗಿ ಕೋಫಿ ಅಣ್ಣನ್ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ, ಯುನೈಟೆಡ್ ನೇಷನ್ಸ್ ನ ಸಂಪರ್ಕ ಮತ್ತು ಸಾರ್ವಜನಿಕ ಮಾಹಿತಿ ವಿಭಾಗದ ಅಧೀನ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯವಹಿಸಿದರು. ೨೦೦೬ರಲ್ಲಿ ಯುನೈಟೆಡ್ ನೇಷನ್ಸ್ ನ ಪ್ರಧಾನ ಕಾರ್ಯದರ್ಶಿಯ ಕಚೇರಿಗೆ ಅವರು ಭಾರತದ ಅಧಿಕೃತ ಅಭ್ಯರ್ಥಿಯಾಗಿ ಸೂಚಿತರಾಗಿ,ಆ ಹುದ್ದೆಗೆ ಆಯ್ಕೆಯಾಗಲು ಮುಂಚೂಣಿಯಲ್ಲಿದ್ದ ಏಳು ಅಭ್ಯರ್ಥಿಗಳಲ್ಲಿ ಎರಡನೆಯ ಸ್ಥಾನವನ್ನು ಪಡೆದರು. ಅವರು ಉತ್ತಮ ಲೇಖಕರೂ, ಅಂಕಣಕಾರರೂ, ಪತ್ರಕರ್ತರೂ, ಮಾನವ-ಹಕ್ಕುಗಳನ್ನು ಪ್ರತಿಪಾದಿಸುವವರೂ ಹಾಗೂ ಪರೋಪಕಾರಿಗುಣ ಉಳ್ಳವರೂ ಆಗಿದ್ದಾರೆ. ಅಷ್ಟೇ ಅಲ್ಲದೆ ಅವರು ಫ್ಲೆಚರ್ ಸ್ಕೂಲ್ ಆಫ್ ಲಾ ಎಂಡ್ ಡಿಪ್ಲೊಮಸಿಯ ಮೇಲ್ವಿಚಾರಕ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ,ಆಸ್ಪೆನ್ ಇನ್ ಸ್ಟಿಟ್ಯೂಟ್ ನ ಟ್ರಸ್ಟೀಗಳ (ನಿಕ್ಷೇಪಧಾರಿಗಳ) ಮಂಡಳಿಯ ಪದಾಧಿಕಾರಿಯಾಗಿದ್ದಾರೆ, ಹಾಗೂ ಇಂಡೋ ಅಮೆರಿಕನ್ ಆರ್ಟ್ಸ್ ಕೌನ್ಸಿಲ್, ದ ಅಮೆರಿಕನ್ ಇಂಡಿಯಾ ಪೌಂಡೇಷನ್,ದ ವರ್ಲ್ಡ್ ಪಾಲಿಸಿ ಜರ್ನಲ್, ದ ವರ್ಚ್ಯೂ ಫೌಂಡೇಷನ್ ಮತ್ತು ಮಾನವ ಹಕ್ಕುಗಳ ಸಂಸ್ಥೆಯಾದ ಬ್ರೇಕ್ ಥ್ರೂ ಗಳ ಸಲಹಾ ಮಂಡಳಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ೨೦೦೮ -೨೦೧೧ರ ಅವಧಿಗೆ ಜಿನೇವಾದ ಇಂಟರ್ ನ್ಯಾಷನಲ್ ಕಮಿಟಿ ಆಫ್ ದ ರೆಡ್ ಕ್ರಾಸ್ ನ ಅಂತಾರಾಷ್ಟ್ರೀಯ ಸಲಹೆಗಾರರಾಗಿರುವ ಇವರು, ನ್ಯೂಯಾರ್ಕ್ ಇನ್ ಸ್ಟಿಟ್ಯೂಟ್ ಆಫ್ ಹ್ಯುಮಾನಿಟೀಸ್ ನ ಫೆಲೋ ಆಗಿಯೂ, ದುಬೈ ಮಾಡ್ರನ್ ಶಾಲೆಯ ಆಧಾರಸ್ಥಂಭವಾಗಿಯೂ ಕಾರ್ಯ ವಹಿಸುತ್ತಿದ್ದಾರೆ. == ಆರಂಭಕ ಜೀವನ == ಕೇರಳದ ಪಾಲಕ್ಕಾಡ್ ನ, ಚಿಟ್ಟಿಲಾಂಚೆರಿಯ ತರೂರ್ ಥಾರವಾಡ್ ಎಂಬ ಸ್ಥಳದ ಚಂದ್ರನ್ ತರೂರ್(ಜನ್ನನಾಮ ತರೂರ ಚಂದ್ರಶೇಖರನ್ ನಾಯರ್)ರವರ ಮಗನಾಗಿ ಶಶಿ ತರೂರ್ ಲಂಡನ್ ನಲ್ಲಿ ಜನಿಸಿದರು.ಚೆ ಕೇರಳದ ಪಾಲಕ್ಕಾಡ್ ನ ಎಳವಾಂಚೆರಿಯ ಮುಂಡಾರತ್ ಥಾರವಾಡ್ ತರೂರ್ ರ ತಾಯಿಯಾದ ಲಿಲ್ಲಿ ತರೂರ್(ಜನ್ಮನಾಮ ಸುಲೇಖಾ ಮೆನನ್)ರ ಜನ್ಮಸ್ಥಳವಾಗಿದ್ದ, ಲಿಲ್ಲಿ ಎಂಬ ಅಡ್ಡಹೆಸರನ್ನೇ ತನ್ನ ಸಾಂಪ್ರದಾಯಿಕ ಹೆಸರಾಗಿ ಅಳವಡಿಸಿಕೊಂಡರು. ತರೂರ್ ರ ಬೇರುಗಳು ಭಾರತದ ಕೇರಳದ ಪಾಲಕ್ಕಾಡ್ ನಲ್ಲಿವೆ. ಅವರ ವಿದ್ಯಾಭ್ಯಾಸವು ಯೆರ್ಕಾಡ್ ನ ಮಾನ್ಫೋರ್ಟ್ ಶಾಲೆಯಲ್ಲೂ, ಮುಂಬೈನ ಕ್ಯಾಂಪಿಯನ್ ಶಾಲೆಯಲ್ಲೂ ಜರುಗಿ, ಪ್ರೌಢಶಾಲೆಯು ಕೋಲ್ಕಟಾದ ಸೇಂಟ್ ಝೇವಿಯರ್ ಕಾಲೇಜಿಯೇಟ್ ಶಾಲೆಯಲ್ಲಿ ಕಳೆದು, ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜ್ ನಲ್ಲಿ ಚರಿತ್ರೆಯಲ್ಲಿ ಕಲಾ ಪದವಿಯನ್ನು ಅವರು ಹೊಂದಿದರು. ಅವರು ನಂತರ ಟಫ್ಟ್ಸ್ ವಿಶ್ವವಿದ್ಯಾಲಯದ ಫ್ಲೆಚರ್ ಸ್ಕೂಲ್ ಆಫ್ ಲಾ ಎಂಡ್ ದಿಪ್ಲೊಮಸಿಯನ್ನು ಸೇರಿದರು. ತರೂರ್ ನಂತರ ಟಫ್ಟ್ಸ್ ವಿಶ್ವವಿದ್ಯಾಲಯದ ಫ್ಲೆಚರ್ ಸ್ಕೂಲ್ ಆಫ್ ಲಾ ಎಂಡ್ ದಿಪ್ಲೊಮಸಿ, ಮಸಾಚ್ಯುಸೆಟ್ಸ್ ನಲ್ಲಿ, ತಮ್ಮ 22ನೆಯ ವಯಸ್ಸಿನಲ್ಲಿ,ಸ್ನಾತಕೋತ್ತರ ಪದವಿಯನ್ನು ಪಡೆದರು. == ವೃತ್ತಿ == 1978ರಲ್ಲಿ ತರೂರ್ ಯುನೈಟೆಡ್ ನೇಷನ್ಸ್ ನ ಹೈ ಕಮಿಷನರ್ ಫಾರ್ ರೆಫ್ಯೂಜೀಸ್ ನಲ್ಲಿ ಉದ್ಯೋಗದಲ್ಲಿ ತೊಡಗಿಕೊಂಡರು, ಈ ಸಂಸ್ಥೆಯ ಸಿಂಗಪುರದ ಕಚೇರಿಯು ಹಡಗಿನ ಜನ ರ ದುರಂತದ ಬಗ್ಗೆ ನಡೆಸಿದ ಕಾರ್ಯಚಟುವಟಿಕಗಳಲ್ಲಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. 1989ರಲ್ಲಿ ನ್ಯೂಯಾರ್ಕ್ ನಯುನೈಟೆಸ್ ನೇಷನ್ಸ್ ಮುಖ್ಯಕಚೇರಿಯಲ್ಲಿ ಹಿರಿಯ ಆಧಿಕಾರಿಯಾಗಿ ಉದ್ಯೋಗವನ್ನಾರಂಭಿಸಿದ ತರೂರ್ 1996 ಅಂತ್ಯದವರೆಗೂ ಪೂರ್ವದಲ್ಲಿ ಯುಗೋಸ್ಲಾವಿಯಾದ ಎಂದು ಕರೆಸಿಕೊಳ್ಳುತ್ತಿದ್ದ ಪ್ರಾಂತ್ಯದಲ್ಲಿನ ಶಾಂತಿಪಾಲನಾ ಕಾರ್ಯಗಳನ್ನು ಯಶಸ್ವಿಯಾಗಿ ನಿಭಾಯಿಸಿದರು. ಜನವರಿ 1997ರಿಂದ ಜುಲೈ 1998ರವರೆಗೂ ತರೂರ್ ಯು ಎನ್ ಪ್ರಧಾನ ಕಾರ್ಯದರ್ಶಿಕೋಫಿ ಅಣ್ಣನ್ ರ ಕಾರ್ಯಕಾರಿ ಸಹಾಯಕರಾಗಿ ಕಾರ್ಯವಹಿಸಿದರು. ನಂತರ ಇವರನ್ನು ಸಂಪರ್ಕ ಮತ್ತು ವಿಶೇಷ ಯೋಜನೆಗಳಿಗಾಗಿ ನಿರ್ದೇಶಕರೆಂದು ಪ್ರಧಾನ ಕಾರ್ಯದರ್ಶಿಯವರ ಕಚೇರಿಯಲ್ಲಿ ನೇಮಿಸಲಾಯಿತು, ಮತ್ತು ಜನವರಿ 2001ರಂದು ಪ್ರಧಾನ ಕಾರ್ಯದರ್ಶಿಗಳು ಸಾರ್ವಜನಿಕ ಮಾಹಿತಿ ವಿಭಾಗದ ಹಂಗಾಮಿ ಮುಖ್ಯಸ್ಥರನ್ನಾಗಿ ನೇಮಿಸಿದರು. ಜೂನ್ 1, 2002ರಂದು ಅವರನ್ನು ಸಂಪರ್ಕ ಮತ್ತು ಸಾರ್ವಜನಿಕ ಮಾಹಿತಿ ವಿಭಾಗದ ಅಧೀನ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಈ ಹುದ್ದೆಯಲ್ಲಿ ಅವರು ಸಂಪರ್ಕ ಕೌಶಲ್ಯದ ಜವಾಬ್ದಾರಿ ಹೊತ್ತು ಯುನೈಟೆಡ್ ನೇಷನ್ಸ್ ನ ಹೆಸರನ್ನೂ, ಕಾರ್ಯಕ್ಷಮತೆಯನ್ನೂ ಮತ್ತೂ ವೃದ್ಧಿಗೊಳಿಸಿದರು. 2003ರಲ್ಲಿ ಪ್ರಧಾನ ಕಾರ್ಯದರ್ಶಿಯು ಇವರಿಗೆ ಯುನೈಟೆಡ್ ನೇಷನ್ಸ್ ನ ಬಹುಭಾಷಾ ಹೊಂದಾವಣೆಗಾರನ (ಕೋಆರ್ಡಿನೇಟರ್ ಫಾರ್ ಮಲ್ಟಿಲಿಂಗ್ವಿಸಂ) ಅಧಿಕ ಜವಾಬ್ದಾರಿಯನ್ನೂ ನೀಡಿತು. ತರೂರ್ ರದು ಅಪರೂಪವಾದ ಯುನೈಟೆಡ್ ನೇಷನ್ಸ್ ಸಂಬಂಧಿತ ಉದ್ಯೋಗವಾಗಿದ್ದು, -2 ಹಂತದಿಂದ ಹಂತಹಂತವಾಗಿ ಮೇಲೇರಿ ಆ ಸಂಸ್ಥೆಯ ಅತ್ಯುಚ್ಛ ಪದವಿಯಾದ ಅಧೀನ ಪ್ರಧಾನ ಕಾರ್ಯದರ್ಶಿಯ ಪದಕ್ಕೆ 23 ವರ್ಷಗಳಲ್ಲಿ ಏರಿದಂತಹ ಮಹತ್ತರ ಸಾಧನೆಯಾಗಿದೆ. ವಿಯೆಟ್ನಾಂನ ಹಡಗಿನ ಜನರ ಕ್ಲಿಷ್ಟ ಸಂದರ್ಭದಿಂದ ಹಿಡಿದು ಯುಗೋಸ್ಲಾವಿಯಾದ ನಾಗರಿಕ ಸಮರದವರೆಗೂ ಹಲವಾರು ಪ್ರಮುಖ ವಿಷಯಗಳಲ್ಲಿ ಪ್ರಮುಖ ಪಾತ್ರ ವಹಿಸುವ ಭಾಗ್ಯ ಅವರದಾಗಿದ್ದು, ಪರೋಪಕಾರಿ, ಶಾಂತಿ-ಪಾಲನ ಮತ್ತು ಪ್ರಧಾನ-ಕಾರ್ಯದರ್ಶಿಗಳ ಕಚೇರಿಯಲ್ಲಿ, ಹೀಗೆ ಎಲ್ಲೆಡೆಯೂ ದುಡಿಯುವ ವಿಶಿಷ್ಟ ಅವಕಾಶ ಅವರದಾಯಿತು. ಸಾರ್ವಜನಿಕ ಮಾಹಿತಿ ವಿಭಾಗದಲ್ಲಿ ತಮ್ಮ ಸುಧಾರಕ ಗುಣಗಳಿಗೆ ಖ್ಯಾತಿ ಪಡೆದ ತರೂರ್ ಯುಎನ್ ನ ಸಿದ್ಧಾಂತಗಳ ಬಗ್ಗೆ ಸ್ಪಷ್ಟ ಹಾಗೂ ಅತ್ಯುತ್ತಮ ದನಿಯಾದುದಲ್ಲದೆ, ಏಕಧೃವೀಕೃತವಾಗುತ್ತಿರುವ ಜಗತ್ತನ್ನು ವಿವಿಧ ದಿಕ್ಕುಗಳಲ್ಲಿ ತೊಡಗಿಸುವಂತಹ ಯುಎನ್ ನ ಉದ್ದೇಶಗಳಿಗೆ ಸೂಕ್ತ ಚಾಲಕರಾದರು. ತರೂರ್ ಹಲವಾರು ನೂತನಪಥ-ಪಥಿಕರಾಗಿದ್ದು ಯುಎನ್ ನ ಮೊಟ್ಟಮೊದಲ ಸೆಮಿಟಿಸಂ-ವಿರೋಧಿ ಸಭೆ ನಡೆಸಿ ದರು, ಮೊದಲ ಇಸ್ಲಾಮೋಫೋಬಿಯಾ ದ ಸಭೆ ಏರ್ಪಡಿಸಿದರು ಮತ್ತು ವಾರ್ಷಿಕ "ಜಗತ್ತು ತಿಳಿಯಬೇಕಾದ, ಆದರೆ ಬಲು ಕಡಿಮೆ ವರದಿಯಾದ ಹತ್ತು ಕಥೆಗಳು" ಎಂಬ ಪಟ್ಟಿ ಯನ್ನು ತಯಾರಿಸುವಲ್ಲಿ ಮೊದಲ ಹೆಜ್ಜೆ ಇರಿಸಿದರು. ತರೂರ್ ಯುಎನ್ ನ ಅಧೀನ ಪ್ರಧಾನ ಕಾರ್ಯದರ್ಶಿಯ ಹುದ್ದೆಗೆ ಫೆಬ್ರವರಿ 9, 2007ರಂದು ರಾಜೀನಾಮೆ ನೀಡಿ, ಏಪ್ರಿಲ್ 1, 2007ರಂದು ಯುಎನ್ ನಿಂದ ಕಡೆಯ ಬಾರಿಗೆ ಹೊರಬಂದರು. === ಪ್ರಧಾನ ಕಾರ್ಯದರ್ಶಿಯ ಹುದ್ದೆಗಾಗಿ ಸ್ಪರ್ಧೆ === ಜೂನ್ 15 , 2006ರಂದು ಭಾರತ ಸರ್ಕಾರವು ಯುಎನ್ ನ ಪ್ರಧಾನ ಕಾರ್ಯದರ್ಶಿಯ ಪಟ್ಟಕ್ಕೆ ಕೋಫಿ ಅಣ್ಣನ್ ನ ಉತ್ತರಾಧಿಕಾರಿಯಾಗಲು ತರೂರ್ ರನ್ನು ತಮ್ಮ ಅಭ್ಯರ್ಥಿಯಾಗಿ ಬೆಂಬಲಿಸುವುದಾಗಿ ಘೋಷಿಸಿತು. ಯುಎನ್ ಭದ್ರತಾ ಕೌನ್ಸಿಲ್ ನಡೆಸಿದ ನಾಲ್ಕುಸ್ಟ್ರಾ ಪೋಲ್ ಗಳಲ್ಲಿ ಜುಲೈ 24ರಂದು ಬನ್ ಗೆ ದೊರೆತ 12 ಮತಗಳ ವಿರುದ್ಧ 10 ಮತಗಳನ್ನು ಪಡೆದರು, ಸೆಪ್ಟೆಂಬರ್, 14 , ಸೆಪ್ಟೆಂಬರ್ 28 ಮತ್ತು ಅಕ್ಟೋಬರ್ 2ರಂದು ನಡೆದ ಸ್ಪರ್ಧೆಯಲ್ಲೂ ತರೂರ್ ಬನ್-ಕಿ-ಮೂನ್ ಗಿಂತಲೂ ಕೊಂಚ ಮಾತ್ರ ಹಿಂದೆ ಇದ್ದು, ಬಿಬಿಸಿ ವೆಬ್ ಸೈಟ್ ನಡೆಸಿದ ಆನ್-ಲೈನ್ ಚುನಾವಣೆಯಲ್ಲಿ ನಿಚ್ಚಳ ಜಯ ಸಾಧಿಸಿದರೂ ಸಹ, ಎರಡನೆಯ ಸ್ಥಾನ ತಲುಪಿದರು. ನಾಲ್ಕನೆಯ ಸ್ಪರ್ಧೆಯಲ್ಲಿ ಅಭ್ಯರ್ಥಿಗಳನ್ನು ನಿಷೇದಿಸುವ ಹಕ್ಕುಳ್ಳ ಐದೂ ಖಾಯಂ ಸದಸ್ಯರ ಬೆಂಬಲವುಳ್ಳ ಏಕೈಕ ಅಭ್ಯರ್ಥಿಯಾಗಿ ಬನ್ ಯಶಗಳಿಸಿದರು. ಕಣದಲ್ಲಿದ್ದ ಏಳು ಅಭ್ಯರ್ಥಿಗಳ ಪೈಕಿ ತರೂರ್ ಮಾತ್ರ ಭದ್ರತಾ ಕೌನ್ಸಿಲ್ ನಲ್ಲಿ ಪ್ರಮುಖಾಂಶ ಪಡೆಯಲು ಯಶಸ್ವಿಯಾದ ಎರಡನೆಯ ಅಭ್ಯರ್ಥಿಯಾದರು; ಒಬ್ಬ ಖಾಯಂ ಸದಸ್ಯ(ನಂತರ ಅವರು ಬುಷ್ ಆಡಳಿತದಲ್ಲಿನ ಯುಎಸ್ ಸದಸ್ಯರೆಂದು ತಿಳಿದುಬಂತು) ಇವರ ವಿರುದ್ಧ ಮತ ಹಾಕಿದ್ದರು ಮತ್ತು ಮತ್ತೊಬ್ಬ ಸದಸ್ಯ (ಚೀನಾದವರು) ಈ ಆಯ್ಕೆಪ್ರಕ್ರಿಯೆಯಲ್ಲಿ ಭಾಗವಹಿಸಲಿಲ್ಲ. ಮತದಾನದ ನಂತರ ತರೂರ್ ತನ್ನ ಹೆಸರನ್ನು ಸ್ಪರ್ಧಿಗಳ ಪಟ್ಟಿಯಿಂದ ಹಿಂತೆಗೆದುಕೊಂಡು, ವರದಿಗಾರರಿಗೆ "ಬನ್ ಗೆದ್ದೇ ಗೆಲ್ಲುವರು ಎಂಬ ವಿಶ್ವಾಸ" ತಮಗಿದೆ ಎಂದರು. ಅವರೇನಾದರೂ ಪ್ರಧಾನ ಕಾರ್ಯದರ್ಶಿಯಾಗಿದ್ದಿದ್ದರೆ ಇದುವರೆಗೂ ಯುಎನ್ ಕಂಡ ಅತ್ಯಂತ ಕಿರಿವಯಸ್ಸಿನ ಪ್ರಧಾನ ಕಾರ್ಯದರ್ಶಿಯಾಗುತ್ತಿದ್ದರು. === ಯುಎನ್ ಜೀವನದ ನಂತರ === ಫೆಬ್ರವರಿ 2007ರಲ್ಲಿ ಯುಎನ್ ನಿಂದ ಹೊರಬಂದ ನಂತರ ತರೂರ್ ಏನು ಮಾಡಬಹುದೆಂದು ಕುತೂಹಲ ತಾಳಿದ್ದ ಜನತೆಗೆ ಇದ್ದು, ತರೂರ್ ವಿದೇಶಾಂಗ ಖಾತೆಯಲ್ಲಿ ರಾಜ್ಯಸಚಿವರಾಗಿ ಮನಮೋಹನ್ ಸಿಂಘ್ ರ ಸಚಿವಸಂಪುಟದಲ್ಲಿ ಸೇರ್ಪಡೆಯಾಗಬಹುದೆಂಬ ವರದಿಯೂ ದೂರದೃಷ್ಟಿಯುಳ್ಳವರಿಂದ ನೀಡಲ್ಪಟ್ಟಿತ್ತು. ಅದೇ ತಿಂಗಳಲ್ಲಿ ಅಮೆರಿಕದ ಗಾಳಿಮಾತಿನ ಬ್ಲಾಗ್ ನಲ್ಲಿ ತರೂರ್ ಲಾಸ್ ಏಂಜಲೀಸ್ ನUSC ಆನ್ ಬರ್ಗ್ ಸ್ಕೂಲ್ ಆಫ್ ಕಮ್ಯುನಿಕೇಷನ್ನ ಡೀನ್ ಆಗುವ ಕಡೆಯ ಹಂತ ತಲುಪಿದ್ದರೆಂದೂ, ಕಡೆಯ ಹಂತದಲ್ಲಿ ತಮ್ಮ ಹೆಸರನ್ನು ಹಿಂತೆಗೆದುಕೊಂಡರೆಂದೂ ವದಂತಿ ಹರಡಿತ್ತು. ಆದರೆ ತರೂರ್- ತನ್ನ ಖಾಸಗಿ ಬದುಕಿನಲ್ಲಿ ಹಮ್ಮಿಕೊಂಡಿರುವ ವಿವಿಧ ಚಟುವಟಿಕೆಗಳ ಜೊತೆಜೊತೆಗೇ - ದುಬೈ ಮೂಲದ ಆಫ್ರಾಸ್ ವೆಂಚರ್ಸ್ ನ ಆಧ್ಯಕ್ಷರಾದರು; ಆ ಸಂಸ್ಥೆಯು ಭಾರತದ ಕೇರಳದಲ್ಲಿನ ಟ್ರಿವೆಂಡ್ರಂನಲ್ಲಿ ಆಫ್ರಾಶ್ ಅಕಾಡೆಮಿ ಫಾರ್ ಬ್ಯುಸಿನೆಸ್ ಕಮ್ಯುನಿಕೇಷನ್ () ಎಂಬ ಸಂಸ್ಥೆಯನ್ನು ಸ್ಥಾಪಿಸಿತು. ಅಕ್ಟೋಬರ್ 2008ರಲ್ಲಿ ತನ್ನ ರಾಜ್ಯದಿಂದ ವಲಸೆ ಹೋಗುವವರೆಗೂ ಕೇರಳದಲ್ಲೇ ಹೆಚ್ಚು ಹೆಚ್ಚು ಸಮಯ ಕಳೆದ ತರೂರ್ ಜಗದಾದ್ಯಂತ ಭಾರತ ಮತ್ತು ಕೇರಳದ ಬಗ್ಗೆ ಸಾಕಷ್ಟು ಸುಪ್ರಚಾರ ನೀಡಿದರು. === ಭಾರತದಲ್ಲಿ ರಾಜಕೀಯ ಜೀವನ === 2009ರ ಮಹಾಚುನಾವಣೆಗೆ ಕೇರಳದ ತಿರುವನಂತಪುರಮ್ ಲೋಕಸಭಾ ಕ್ಷೇತ್ರದಿಂದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನ ಉಮೇದುವಾರರಾಗಿ ಮಾರ್ಚ್ 13, 2009ರಂದು ತರೂರ್ ಸ್ಪರ್ಧಿಸುವರೆಂದು ಘೋಷಿಸಲಾಯಿತು. ತರೂರ್ ಸ್ಪರ್ಧಿಸಿದ ಪಂಚಕೋನ ಪೈಪೋಟಿಯಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ()ದ ರಾಮಚಂದ್ರನ್ ನಾಯರ್,ಬಹುಜನ ಸಮಾಜ ಪಾರ್ಟಿ ()ಯ ನೀಲೋಹಿತದಾಸನ್ ನಾದರ್, ನ್ಯಾಷನಲಿಸ್ಟ್ ಕಾಂಗ್ರೆಸ ಪಕ್ಷ()ದ ಎಂ.ಪಿ.ಗಂಗಾಧರನ್ ಮತ್ತು ಭಾರತೀಯ ಜನತಾ ಪಕ್ಷ()ದ ಪಿ.ಕೆ.ಕೃಷ್ಣದಾಸ್ ಪಾಲ್ಗೊಂಡಿದ್ದರು. ತರೂರ್ ರ ರಾಜಕೀಯ ವೆಬ್ ಸೈಟ್ .., ಮತ್ತು ಅವರ ಚುನಾವಣಾ ಪ್ರಚಾರದಲ್ಲಿ ಉಪಯೋಗಿಸಿದ ನವೀನ ತಂತ್ರಾಂಶಗಳು (ಈ-ಮೇಲ್ ಗಳು, ಧ್ವನಿ ಎಸ್ಎಮ್ಎಸ್ಗಳು ಮತ್ತು ಸಾಮಾಜಿಕ ಅಂತರಜಾಲ ವೆಬ್ ಸೈಟ್ ಗಳಾದ ಫೇಸ್ ಬುಕ್ ಮತ್ತು ಟ್ವಿಟರ್ಗಳ ಉಪಯೋಗಿಸುವಿಕೆಯನ್ನೊಳಗೊಂಡಂತೆ) ಮುಂದೆ ರಾಜಕೀಯ ವೆಬ್ ಸೈಟ್ ಗಳು ಮತ್ತು ತತ್ಸಂಬಂಧಿತ ಸಂಸ್ಥೆಗಳು ಉಪಯೋಗಿಸಲ್ಪಡುವುದಕ್ಕೆ ನಾಂದಿ ಹಾಡಿದವು. ಕೆಲಕಾಲದಲ್ಲೇ ಅವರು ಟ್ವಿಟರ್ ನಲ್ಲಿ ಒಂದು ಲಕ್ಷ ಅಭಿಮಾನಿಗಳನ್ನು ಹೊಂದಿದಂತಹ ಮೊಟ್ಟಮೊದಲ ತಾರೆಯೆನಿಸಿಕೊಂಡರು. ಎಡಪಕ್ಷದ ವಿರೋಧದ ಮತಗಳು ಹಲವಾರು ಅಭ್ಯರ್ಥಿಗಳಿಗೆ ಹಂಚಿಹೋದಾಗ್ಯೂ, ಇವರು ಮೇಲುಸ್ತರದ "ಹೊರಗಿನವನು" ಎಂದು ವಿರೋಧಪಕ್ಷದವರು ಆಕ್ರಮಣ ಮಾಡಿದಾಗ್ಯೂ, ತರೂರ್ ತನ್ನ ಸಮೀಪದ ಪ್ರತಿಸ್ಪರ್ಧಿ ಸಿಪಿಐನ ಪಿ.ರಾಮಚಂದ್ರ ನಾಯರ್ ಗಿಂತಲೂ ಸುಮಾರು ಒಂದು ಲಕ್ಷ ಮತಗಳ(ಕಡೆಯ ಮೂವತ್ತು ವರ್ಷಗಳಲ್ಲಿ ತಿರುವನಂತಪುರಂನಲ್ಲಿ ಯಾವುದೇ ಅಭ್ಯರ್ಥಿ ಜಯಗಳಿಸಿದ ಅತಿ ಹೆಚ್ಚಿನ ಗೆಲುವಿನ ಅಂತರವಿದು)ಅಂತರದಿಂದ ಜಯಗಳಿಸಿದರೆಂದು ಮೇ 16, 2009ರಂದು ಹೊರಬಿದ್ದ ಚುನಾವಣಾ ಫಲಿತಾಂಶಗಳು ಘೋಷಿಸಿದವು. ಮೇ 28, 2009ರಂದು ಶಶಿ ತರೂರ್ ಭಾರತ ಸಂಯುಕ್ತ ಸರ್ಕಾರದ ಪ್ರಧಾನಿ ಮನಮೋಹನ್ ಸಿಂಘ್ ರ ಸಚಿವಸಂಪುಟದಲ್ಲಿ ವಿದೇಶಾಂಗ ಇಲಾಖೆಯ ರಾಜ್ಯಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. == ಸಾಹಿತ್ಯ ವ್ಯಾಪ್ತಿ == ತರೂರ್ ಇಂಗ್ಲಿಷ್ ನಲ್ಲಿ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಅವರ ಬಹುತೇಕ ಕೃತಿಗಳು ಭಾರತೀಯ ವಿಚಾರಗಳಿಗೆ ಸಂಬಂಧಿಸಿದ್ದು "ಭಾರತೀಯ-ಸೊಗಡಿಗೆ ಮರಳುವ" ವಿಷಯದ್ದಾಗಿವೆ. ಪ್ರಾಯಶಃ ಅವರ ಬಹುಬೇಡಿಕೆಯ ಕೃತಿಯಾದ, 1989ರಲ್ಲಿ ಪ್ರಕಟವಾದ, ದ ಗ್ರೇಟ್ ಇಂಡಿಯನ್ ನಾವೆಲ್ ನಲ್ಲಿ, ಅವರು ಭಾರತದ ಮಹಾಕಾವ್ಯವಾದ ಮಹಾಭಾರತದ ವಿಷಯ ಮತ್ತು ನಿರೂಪಣಾಶೈಲಿಯಲ್ಲೇ ಭಾರತದ ಸ್ವಾಂತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದವರ ವ್ಯಕ್ತಿತ್ವಗಳನ್ನು ವಕ್ರದೃಷ್ಟಿಯಿಂದ ನೋಡಿ, ಭಾರತೀಯ ಜೀವನವನ್ನು ವಿಡಂಬನಾತ್ಮಕ ಶೈಲಿಯಲ್ಲಿ ಬಿಂಬಿಸಿದರು. ಅವರ ಕಾದಂಬರಿ ಷೋ ಬಿಸಿನೆಸ್ (1992)"ಬಾಲಿವುಡ್ " ಹೆಸರಿನಲ್ಲಿ ಚಲನಚಿತ್ರವಾಯಿತು.[೧] (1994) .ದಿವಂಗತ ಇಸ್ಮೈಲ್ ಮರ್ಚೆಂಟ್ ತರೂರ್ ರ ಕಾದಂಬರಿ 'ರಾಯಿಟ್' ಆಧರಿಸಿ ಒಂದು ಚಿತ್ರ ಮಾಡುವ ಅಭಿಲಾಷೆಯನ್ನು 2005ರಲ್ಲಿ ಗತಿಸುವ ಕೆಲವೇ ದಿನ ಮುನ್ನ ವ್ಯಕ್ತಪಡಿಸಿದ್ದರು. ತರೂರ್ ಬಹಳ ಗೌರವಿಸಲ್ಪಟ್ಟ ಅಂಕಣಕಾರರಾಗಿ ಭಾರತದ ಮೂರು ಪ್ರಖ್ಯಾತ ಇಂಗ್ಲಿಷ್ ಪತ್ರಿಕೆಗಳಲ್ಲಿ ಹೆಸರುಮಾಡಿದ್ದು, ಇತ್ತೀಚೆಗೆ ದ ಹಿಂದೂ ಪತ್ರಿಕೆಯಲ್ಲೂ (2001-2008)ಮತ್ತು "ಶಶಿ ಆನ್ ಸಂಡೇ" ಎಂಬ ಟೈಮ್ಸ್ ಆಫ್ ಇಂಡಿಯಾ ದ ಸಾಪ್ತಾಹಿ ಅಂಕಣದಲ್ಲೂ (ಜನವರಿ 2007 - ಡಿಸೆಂಬರ್ 2008) ಲೇಖನಗಳ ಹೊಳೆ ಹರಿಸಿದ್ದಾರೆ. ಇದಕ್ಕೂ ಮುನ್ನ ಅವರು ಜೆಂಟಲ್ ಮನ್ ಪತ್ರಿಕೆಗೆ ಅಂಕಣಕಾರರಾಗಿದ್ದರು ಮತ್ತು ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಅಂಕಣ ಬರೆದಿದ್ದರಲ್ಲದೆ ನ್ಯೂಸ್ ವೀಕ್ ಇಂಟರ್ ನ್ಯಾಷನಲ್ ಮತ್ತು ಇಂಟರ್ ನ್ಯಾಷನಲ್ ಹೆರಾಲ್ಡ್ ಟ್ರಿಬ್ಯೂನ್ ಗೆ ಆಗಾಗ್ಗೆ ಲೇಖನಗಳನ್ನು ನೀಡುತ್ತಿದ್ದರು. ಅವರ ಅಭಿಪ್ರಾಯ-ಸಂಪಾದಕೀಯಗಳು, ಮತ್ತು ಪುಸ್ತಕ ವಿಮರ್ಶೆಗಳು ದ ವಾಷಿಂಗ್ಟನ್ ಪೋಸ್ಟ್ . ದ ನ್ಯೂಯಾರ್ಕ್ ಟೈಮ್ಸ್ ಮತ್ತು ದ ಲಾಸ್ ಏಂಜಲೀಸ್ ಟೈಮ್ಸ್ ಗಳಲ್ಲಲ್ಲದೆ ಇನ್ನೂ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ತರೂರ್ ತನ್ 6ನೆಯ ವಯಸ್ಸಿನಲ್ಲಿಯೇ ಬರೆಯಲು ಆರಂಭಿಸಿದರು ಮತ್ತು ಅವರ ಮೊಟ್ಟ ಮೊದಲ ಕಥೆ "ಭಾರತ್ ಜ್ಯೋತಿ" ಮುಂಬೈಯ "ಫ್ರೀ ಪ್ರೆಸ್ ಜರ್ನಲ್"ನ ಭಾನುವಾರದ ಸಾಪ್ತಾಹಿಕ ಸಂಚಿಕೆಯಲ್ಲಿ ಅವರು 10ರ ಹರೆಯದವರಾಗಿದ್ದಾಗಲೇ ಪ್ರಕಟವಾಗಿತ್ತು. ಅವರ ವರ್ಲ್ಡ್ ವಾರ್ IIರ ಸಾಹಸಮಯ ಕಾದಂಬರಿ ಆಪರೇಷನ್ ಬೆಲ್ಲೋಸ್ ಬಿಗ್ಗಲ್ಸ್ ಬುಕ್ಸ್ ನಿಂದು ಪ್ರೇರಿತವಾಗಿದ್ದು, ಅದು ಜೂನಿಯರ್ ಸ್ಟೇಟ್ಸ್ ಮನ್ ಪತ್ರಿಕೆಯಲ್ಲಿ ಧಾರಾವಾಹಿಯಾಗಿ, ಅವರ ಹನ್ನೊಂದನೆಯ ಹುಟ್ಟುಹಬ್ಬಕ್ಕೂ ಮೊದಲಿನಿಂದಲೇ, ಪ್ರಕಟಿತವಾಗತೊಡಗಿತ್ತು. ಅವರ ಎಲ್ಲಾ ಪುಸ್ತಕಗಳೂ ಭಾರತದಲ್ಲಿ ಬೆಸ್ಟ್ ಸೆಲ್ಲರ್ ಗಳಾಗಿವೆ. ದ ಗ್ರೇಟ್ ಇಂಡಿಯನ್ ನಾವೆಲ್ ಈಗ 26ನೆಯ ಮುದ್ರಣದಲ್ಲಿದ್ದು, ಅವರ ಇತ್ತೀಚಿನ ಕೃತಿ ದ ಎಲಿಫೆಂಟ್, ದ ಟೈಗರ್ ಎಂಡ್ ದ ಸೆಲ್ ಫೋನ್ ಐದನೆಯ ಬಾರಿಗೆ ಹಾರ್ಡ್ ಬ್ಯಾಕ್ ಮರುಮುದ್ರಣಗೊಳ್ಳುತ್ತಿದೆ. ತರೂರ್ ಭಾರತದಾದ್ಯಂತ ಭಾಷಣಗಳನ್ನು ಮಾಡಿದ್ದಾರೆ ಮತ್ತು ಅವರ ವಿಚಾರಗಳಲ್ಲಿ ಹಲವನ್ನು ಭಾಷಣಗಳಲ್ಲಿ ಉಲ್ಲೇಖಿಸಲು ಉಪಯೊಗಸಲ್ಪಡುತ್ತಿದ್ದು ಅದರಲ್ಲಿ "ಭಾರತವು, ಜನ ಹೇಳುವಂತೆ, ಅಭಿವೃದ್ಧಿಕುಂಠಿತ ದೇಶವಲ್ಲ, ಬದಲಾಗಿ, ಅದರ ಇತಿಹಾಸ ಮತ್ತು ಸಂಸ್ಕೃತಿಯ ಪರಂಪರೆಯನ್ನು ಗಮನಿಸಿಸಿದಾಗ, ಬಹಳ ಅಭಿವೃದ್ಧಿ ಹೊಂದಿ ಈಗ ಕೊಳೆತುಹೋಗಿರುವ ಸ್ಥಿತಿಯಲ್ಲಿ ಬಹಳ ಮುಂದುವರೆದಿದೆ" ಎನ್ನುವುದೂ ಒಂದು. ಅವರು ಭಾರತದ ಥಾಲಿ ಮತ್ತು ಅಮೆಲಿಕದ ಮೆಲ್ಟಿಂಗ್ ಪಾಟ್ ಗಳನ್ನು ಸ್ಮರಣಾರ್ಹವಾದ ರೀತಿಯಲ್ಲಿ ಹೋಲಿಸಿದ್ದಾರೆ: "ಅಮೆರಿಕವು ಒಂದು ಮೆಲ್ಟಿಂಗ್ ಪಾಟ್(ಕರಗುವ ಮಡಿಕೆ)ಯಾದರೆ ಭಾರತವು ನನಗೆ ಥಾಲಿ - ರುಚಿಕರವಾದ ತಿನಿಸುಗಳನ್ನು ವಿವಿಧ ಬಟ್ಟಲುಗಳಲ್ಲಿ ಹೊಂದಿರುವಂತಹುದು. ಪ್ರತಿ ಬಟ್ಟಲೂ ಬೇರೆ ರುಚಿ ಹೊಂದಿರುತ್ತದೆ, ಮತ್ತು ಪಕ್ಕದ ತಿನಿಸಿನೊಂದಿಗೆ ಹೊಂದಿಕೊಳ್ಳಲೇ ಬೇಕೆಂದೇನಿಲ್ಲ, ಆದರೆ ಒಂದೇ ತಟ್ಟೆಯಲ್ಲಿ ಒಟ್ಟಿಗೇ ಇದ್ದುಕೊಂಡು, ಪರಸ್ಪರ ಹೊಂದಾಣಿಕೆಯಾಗುವಂತಿದ್ದು, ಇಡೀ ಊಟವು ತೃಪ್ತಿಕರವಾಗುವಂತೆ ಮಾಡುತ್ತವೆ" ಎನ್ನುತ್ತಾರೆ ತರೂರ್. . == ವೈಯಕ್ತಿಕ ಜೀವನ == ತರೂರ್ ಗೆ ಕ್ರಿಕೆಟ್ ಎಂದರೆ ಪ್ರಾಣ, ಅದರಲ್ಲೂ ಭಾರತೀಯ ಕ್ರಿಕೆಟ್; ಅದರ ಬಗ್ಗೆ ದ ಕ್ರಿಕೆಟರ್ ಇಂಟರ್ ನ್ಯಾಷನಲ್ , ದ ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ ಮತ್ತು ದ ಹಿಂದೂ ಗಳಲ್ಲಿ ಲೇಖನಗಳನ್ನು ಬರೆದಿದ್ದಾರೆ. ರಂಗದ ಗೀಳು ಇದ್ದು ಶಾಲಾದಿನಗಳಲ್ಲಿ ಯಶಸ್ವಿ ನಟರಾಗಿದ್ದ ತರೂರ್ ಮೀರಾ ನಾಯರ್ ರ ಕ್ಲಿಯೋಪಾತ್ರ ಎಂಬ 1974ರಲ್ಲಿ ನಿರ್ಮಿತವಾದ ಆಂಥೋನಿ ಮತ್ತು ಕ್ಲಿಯೋಪಾತ್ರ ನಾಟಕದ ಅವತರಣಿಕೆಯಲ್ಲಿ ಆಂಥೋನಿಯ ಪಾತ್ರ ವಹಿಸಿದ್ದರು. 1970ರ ಆದಿಯಲ್ಲಿ ಸೇಂಟ್ ಸ್ಟೀಫನ್ ಕಾಲೇಜ್ ನಲ್ಲಿ ಅವರು ಸ್ಥಾಪಿಸದ ಕ್ವಿಜ್ ಕ್ಲಬ್ ಇನ್ನೂ ನಡೆಯುತ್ತಿದೆ. ಅವರು ವುಡ್ ಹೌಸ್ ಸೊಸೈಟಿಗೂ ಪುನಶ್ಚೇತನ ನೀಡಿದರೂ ಈಗ ಅದು ಅಸ್ತಿತ್ವದಲ್ಲಿಲ್ಲ. ಕಾಲೇಜ್ ಯೂನಿಯನ್ ಗೆ ಅಧ್ಯಕ್ಷನಾಗಿ ಆಯ್ಕೆಯಾದ ನಂತರ(ಚುನಾವಣಾ ಪ್ರಚಾರ ಘೋಷಣೆ: "ಶಶಿ ತರೂರ್ ಜೀತೇಗಾ ಝರೂರ್ ")ಅವರು ಹಿಸ್ಟರಿ ಸೊಸೈಟಿಯ ಕಾರ್ಯದರ್ಶಿತ್ವಕ್ಕೂ ಮತ್ತು ಕಾಲೇಜಿನ ವಿನೋದಪತ್ರಿಕೆಯಾದ "ಕೂಲರ್ ಟಾಕ್"ನ ಸಂಪಾದಕ ಹುದ್ದೆಗೂ ರಾಜೀನಾಮೆ ನೀಡಿದರು. 2005ರಲ್ಲಿ ಸೇಂಟ್ ಸ್ಟೀಫನ್ ಕಾಲೇಜ್ ತನ್ನ 125ನೆಯ ವಾರ್ಷಿಕೋತ್ಸವದಂದು ಭಾಷಣ ಮಾಡಲು ತರೂರ್ ರನ್ನು ಆಹ್ವಾನಿಸಿತ್ತು. ಅವರು ದ ನ್ಯೂ ಯಾರ್ಕ್ ಇನ್ ಸ್ಟಿಟ್ಯೂಟ್ ಫಾರ್ ದ ಹ್ಯುಮಾನಿಟೀಸ್ನ ಚುನಾಯಿತ ಫೆಲೋ ಆಗಿದ್ದರು ಮತ್ತು ಇಂಡೋ-ಅಮೆರಿಕನ್ ಆರ್ಟ್ಸ್ ಕೌನ್ಸಿಲ್ ನ ಸಲಹಾ ಮಂಡಳಿಯ ಸದಸ್ಯರೂ ಆಗಿದ್ದರು. ಜಾಗತಿಕ ಮಾನವ ಹಕ್ಕುಗಳ ಸಂಸ್ಥೆಯಾದ ಬ್ರೇಕ್ ಥ್ರೂ ನ ನಿರ್ದೇಶಕಮಂಡಳಿಯಲ್ಲಿ, ಫ್ಲೆಚರ್ ಸ್ಕೂಲ್ ಆಫ್ ಲಾ ಎಂಡ್ ಡಿಪ್ಲೊಮಸಿಯ ಮೇಲ್ವಿಚಾರಣ ಮಂಡಲಿಯ ಸದಸ್ಯರಾಗಿ, ಆಸ್ಪೆನ್ ಇನ್ ಸ್ಟಿಟ್ಯೂಟ್ ನ ಟ್ರಸ್ಟಿಗಳ ಮಂಡಳಿಯವರಾಗಿ ಮತ್ತು ಇಂಟರ್ ನ್ಯಾಷನಲ್ ಕಮಿಟಿ ಆಫ್ ರೆಡ್ ಕ್ರಾಸ್ ನ ಜಾಗತಿಕ ಸಲಹೆಗಾರರೂ ಆಗಿ ಸೇವೆ ಸಲ್ಲಿಸಿದ್ದಾರೆ. ಅವರು ಹಲವಾರು ವಿದ್ಯಾಸಂಬಂಧಿತ ವಿಷಯಗಳನ್ನು ಬೆಂಬಲಿಸಿದ್ದು, ಯುಎಇನಲ್ಲಿರುವ ದುಬೈ ಮಾಡ್ರನ್ ಸ್ಕೂಲ್ ನ ಪೋಷಕರಾಗಿದ್ದಾರೆ. ಅವರು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನ ಸದಸ್ಯರು. 1976ರಲ್ಲಿ ದ ಫ್ಲೆಚರ್ ಸ್ಕೂಲ್ ಆಫಾ ಲಾ ಎಂಡ್ ಡಿಪ್ಲೊಮಸಿಯಲ್ಲಿ ಅವರು ದ ಎಡಿಟೋರಿಯಲ್ ಬೋರ್ಡ್ ಆಫ್ ದ ಫ್ಲೆಚರ್ ಫೋರಂ ಆಫ್ ಇಂಟರ್ ನ್ಯಾಷನಲ್ ಅಫೇರ್ಸ್ ಎಂಬ ಅಂತರರಾಷ್ಟ್ರೀಯ ಸಂಬಂಧಗಳ ಕುರಿತಾದ ಪತ್ರಿಕೆಯೊಂದರ ಆಧ್ಯಕ್ಷೀಯ ಪೀಠ(ಪ್ರಾಯಶಃ ಇಂತಹ ಮೊದಲ ಪೀಠ)ವನ್ನು ಸ್ಥಾಪಿಸಿದರು. ತರೂರ್ ಗೆ ಮೊದಲ ವಿವಾಹದಿಂದ ಈಶಾನ್ ಮತ್ತು ಕನಿಷ್ಕ್ ಎಂಬ ಇಬ್ಬರು ಅವಳಿ-ಜವಳಿ ಗಂಡುಮಕ್ಕಳಿದ್ದಾರೆ. ಇಬ್ಬರೂ ಯೇಲ್ ವಿಶ್ವವಿದ್ಯಾಲಯದಲ್ಲಿ ಓದಿದರು. ಈಶಾನ್ ಟೈಮ್ಸ್ ಪತ್ರಿಕೆಯ ಹಾಂಗ್ ಕಾಂಗ್ ನ ಅಂತರರಾಷ್ಟ್ರೀಯ ಸಂಚಿಕೆಯಲ್ಲಿ ಬರೆಯುತ್ತಾರೆ, ಕನಿಷ್ಕ್ ಲಂಡನ್ ನ ಓಪನ್ ಡೆಮಾಕ್ರೆಸಿಯಲ್ಲಿ ಸಂಪಾದಕರಾಗಿದ್ದಾರೆ. == ವಿವಾದಗಳು == ತರೂರ್ "ಇಂಡಿಯಾ ಈಸ್ ಇಸ್ರೇಲ್ ಎನ್ವಿ" ಎಂಬ ಲೇಖನದ ಮೂಲಕ ಸಾರ್ವಜನಿಕರ ಗಮನ ಸೆಳೆದರು. ಅದರಲ್ಲಿ ಇಸ್ರೇಲ್ ಬಗ್ಗೆ ಅನುಕಂಪದ ವಾಕ್ಯಗಳು ಇದ್ದವು. ನಂತರದ ದಿನಗಳಲ್ಲಿ,2009ರ ಲೋಕಸಭಾ ಚುನಾವಣೆಗಾಗಿ ತಿರುವನಂತಪುರಂ ಕ್ಷೇತ್ರದಿಂದ ತರೂರ್ ಸ್ಪರ್ಧೆಗಿಳಿದಾಗ, ಈ ವಿಷಯವನ್ನು ಅವರ ವಿರುದ್ಧ ಪ್ರಚಾರ ಮಾಡಲು ಉಪಯೋಗಿಸಲಾಯಿತು. ಆದರೆ ಪ್ಯಾಲೆಸ್ಟೇನಿಯನ್ ವಿಷಯಗಳ ಬಗ್ಗೆ ಅವರು ಯುಎನ್ ನಲ್ಲಿದ್ದಾಗ ತೆಗೆದುಕೊಂಡ ನಿರ್ಧಾರಗಳನ್ನು ತೋರಿಸಿವುದರ ಮೂಲಕ ಈ ಟೀಕೆಗಳನ್ನು ತರೂರ್ ಮಟ್ಟ ಹಾಕಿದರು. ಸೆಪ್ಟೆಂಬರ್ 2009ರಲ್ಲಿ ತರೂರ್ ಮತ್ತು ಎಸ್.ಎಂ.ಕೃಷ್ಣರವರು ದುಬಾರಿಯಾದ ಪಂಚತಾರಾ ಹೊಟೆಲ್ ಗಳಲ್ಲಿ ತಂಗಿದ್ದರೆಂದು ಆರೋಪ ಹೊರಿಸಲಾಯಿತು. ತಮಗೆ ನೀಡಬೇಕಾದ ಸರ್ಕಾರಿ ಗೃಹವನ್ನು ನೀಡುವುದರಲ್ಲಿ ವಿಳಂಬವಾದುದರಿಂದ ಹೀಗೆ ಮಾಡಬೇಕಾಯಿತೆಂದೂ, ಹೊಟೆಲ್ ನ ಖರ್ಚನ್ನು ತಾವೇ ಸ್ವಂತ ಹಣದಿಂದ ಭರಿಸುತ್ತಿರುವುದಾಗಿಯೂ ಹೇಳಿಕೆ ನೀಡಿ ತರೂರ್ ಸಮರ್ಥಿಸಿಕೊಂಡರು. ನಂತರ,ಪ್ರಣಬ್ ಮುಖರ್ಜಿಯವರ ಕೋರಿಕೆ ಯ ಮೇರೆಗೆ ತರೂರ್ ಮತ್ತು ಕೃಷ್ಣ ಹೊಟೆಲ್ ಗಳಿಂದ ನಿಷ್ಕ್ರಮಿಸಿದರು. ತರೂರ್ ರನ್ನು ನೀವು ಎಂದು "ಕ್ಯಾಟಲ್ ಕ್ಲಾಸ್" (ದನದ ಶ್ರೇಣಿ)ನಲ್ಲಿ ಪ್ರಯಾಣ ಮಾಡುತ್ತೀರಿ ಎಂದು ವಿನೋದಕ್ಕಾಗಿ ಕೇಳಿದಾಗ ತರೂರ್ ತಾನು ಹಾಗೆ ಪ್ರಯಾಣ ಮಾಡುವುದಾಗಿ ಹೇಳಿದುದು ಮತ್ತೊಂದು ವಿವಾದಕ್ಕೆ ಎಡೆ ಮಾಡಿಕೊಟ್ಟಿತು. @ShashiTharoorನಲ್ಲಿ ನೀಡಿದ ಈ ಹೇಳಿಕೆಯಿಂದ ತರೂರ್ ಪ್ರವಾಸಿ ಸಾರ್ವಜನಿಕರನ್ನು ಜಾನುವಾರುಗಳಿಗೆ ಹೋಲಿಸಿದನೆಂದು ಜರೆದ ಮಾಧ್ಯಮ, ಅವನ ಪಕ್ಷವಾದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಅನ್ನೂ ಅವರ ನಿಷ್ಠುರ ನಿಲುವಿನ ಬಗ್ಗೆ ಟೀಕೆ ಮಾಡಿತು. ಕಾಂಗ್ರೆಸ್ ಇವರ ವಿರುದ್ಧ ಕ್ರಮ ಜರುಗಿಸಬಹುದೆಂದೂ ವರದಿಯಾಗಿತ್ತು.. ಆದರೆ ಪ್ರದಾನಿ ಮನಮೋಹನ್ ಸಿಂಘ್ ಅದು ವಿನೋದಕ್ಕಾಗಿ ಹೇಳಿದುದಷ್ಟೇ ಎಂದು ಹೇಳುವುದರ ಮೂಲಕ ಈ ಸನ್ನಿವೇಶಕ್ಕೆ ತೆರೆ ಬಿತ್ತು. ತರೂರ್ ತನ್ನ ಪಕ್ಷದ ಮುಖಂಡರನ್ನು ಭೇಟಿಯಾಗಿ ಅವರಿಗೆ ಈ ವಿಷಯದ ಬಗ್ಗೆ ವಿವರಣೆಯನ್ನು ಸಲ್ಲಿಸಿದರು. ಗಾಂಧಿ ಜಯಂತಿಯಂದು ಜನರು ರಜ ತೆಗೆದುಕೊಂಡು ಮನೆಯಲ್ಲಿರುವುದರ ಬದಲು ಕೆಲಸದಲ್ಲಿ ತೊಡಗಿರುವುದರ ಮೂಲಕ ಮಹಾತ್ಮಾ ಗಾಂಧಿಯವರಿಗೆ ಸೂಕ್ತವಾದ ಶ್ರದ್ಧಾಂಜಲಿ ಅರ್ಪಿಸಬೇಕು ಎಂದು ನೀಡಿದ ಹೇಳಿಕೆಯು ಮತ್ತೊಂದು ವಿವಾದವನ್ನು ಹುಟ್ಟುಹಾಕಿತು. 26/11ರ ಕುಕೃತ್ಯಕ್ಕೆ ಕಾರಣರಾದವರೆನ್ನಲಾದ ಡೇವಿಡ್ ಹೆಡ್ಲಿ ಮತ್ತು ತಹಾವುರ್ ರಾಣಾರನ್ನು ದಸ್ತಗಿರಿ ಮಾಡುವುದರಲ್ಲಿ ಉಂಟಾದ ನ್ಯೂನತೆಗಳನ್ನು ಶೂನ್ಯಗೊಳಿಸಲು ಸರ್ಕಾರವು ತೆಗೆದುಕೊಂಡ ನೂತನ ವೀಸಾ ಕ್ರಮಗಳನ್ನು ಸಾರ್ವಜನಿಕವಾಗಿ ಟೀಕೆ ಮಾಡುವುದರ ಮೂಲಕ ತರೂರ್ ಮತ್ತೆ ಸುದ್ದಿಯಲ್ಲಿದ್ದರು. ಸರ್ಕಾರದ ಅಧಿಕಾರಿಯ ಹುದ್ದೆಯಲ್ಲಿದ್ದು ಸರ್ಕಾರವನ್ನೇ ಟೀಕೆ ಮಾಡಿದುದಕ್ಕಾಗಿ ಇವರಿಗೆ ಛೀಮಾರಿ ಹಾಕಲಾಯಿತು. ಅವರು ನಂತರ ವಿದೇಶಾಂಗ ಸಚಿವ ಎಸ್,ಎಂ,ಕೃಷ್ಣರನ್ನು ಭೇಟಿ ಮಾಡಿ ಆ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ನಿವೇದಿಸಿದರು. ತದನಂತರ ಆ ಕಾನೂನಿನಲ್ಲಿ ಭಾಗಶಃ ಬದಲಾವಣೆಗಳನ್ನು ಮಾಡಲಾಯಿತು. ಜನವರಿ 2010ರಲ್ಲಿ ಗಾಂಧಿ ಮತ್ತು ನೆಹರೂರವರನ್ನು, ಅವರ ದೃಷ್ಟಿಕೋನದಲ್ಲಿನ ಭಾರತೀಯ ವಿದೇಶಾಂಗ ನೀತಿಯ ಬಗ್ಗೆ ತರೂರ್ ಟೀಕೆ ಮಾಡಿದರೆಂದು ತಪ್ಪಾಗಿ ಮತ್ತು ಉದ್ದೇಶಪೂರ್ವಕವಾಗಿ ಭಾರತದ ಮಾಧ್ಯಮಗಳು ವರದಿ ಮಾಡಿದ್ದವು. ಇದರಿಂದ ಅವರ ಪಕ್ಷವಾದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ವ್ಯಗ್ರಗೊಂಡಿತು. ಈ ವಿವಾದ ಏಳುತ್ತಿರುವಂತೆಯೇ ತರೂರ್ ತಮ್ಮ ವೆಬ್ ಸೈಟ್ ನಲ್ಲಿ ಒಂದು ಪತ್ರಿಕಾಹೇಳಿಕೆ ನೀಡುತ್ತಾ, "ಬೇಜವಾಬ್ದಾರಿ ವರದಿಗಾರಿಕೆಯು ಕೊಂಚಕಾಲ ಕೆಲವು ವಿವಾದ-ಬೇಡುವ ಮಾಧ್ಯಮವರ್ಗದವರಿಗೆ ಸಂತಸ ನೀಡಬಹುದು, ಆದರೆ ನಮ್ಮ ಪ್ರಜಾಪ್ರಭುತ್ವದಲ್ಲಿ ವಿದೇಶಾಂಗ ನೀತಿಯ ಬಗ್ಗೆ ಆಗಬೇಕಾದ ವಿಶ್ಲೇಷಣಾತ್ಮಕ ವಿಚಾರ ವಿನಿಮಯದ ಬಗ್ಗೆ ಅವರಿಂದ ಯಾವ ಉಪಯೋಗವೂ ದೊರಕದು. ಭಾರತ ಇದಕ್ಕಿಂತಲೂ ಹೆಚ್ಚಿನದಕ್ಕೆ ಅರ್ಹವಾಗಿದೆ. ನಿಜಕ್ಕೂ, ನಾನೂ ಸಹ" ಎಂದರು. == ಪ್ರಶಸ್ತಿಗಳು ಮತ್ತು ಮಾನ್ಯತೆಗಳು == 1976ರಲ್ಲಿ, ತಮ್ಮ 20ನೆಯ ವಯಸ್ಸಿನಲ್ಲಿ, 30 ವರ್ಷದ ಒಳಗಿನ ಭಾರತದ ಅತ್ಯುತ್ತಮ ಪತ್ರಕರ್ತನಿಗೆ ನೀಡುವ ರಾಜಿಕಾ ಕೃಪಲಾನಿ ಯುವ ಪತ್ರಕರ್ತ ಪ್ರಶಸ್ತಿಯನ್ನು ಜಯಿಸಿದರು. 1990ರಲ್ಲಿ ತರೂರ್ ರ ದ ಗ್ರೇಟ್ ಇಂಡಿಯನ್ ನಾವೆಲ್ ಎಂಬ ಪುಸ್ತಕವು ಆ ವರ್ಷದ ಅತ್ಯುತ್ತಮ ಕೃತಿಯೆಂದು ಪರಿಗಣಿಸಲ್ಪಟ್ಟು ಫೆಡರೇಷನ್ ಆಫ್ ಇಂಡಿಯನ್ ಪಬ್ಲಿಷರ್ಸ್-ಹಿಂದೂಸ್ತಾನ್ ಟೈಮ್ಸ್ ಲಿಟರರಿ ಅವಾರ್ಡ್ ಗಳಿಸಿತು. ಅದೇ ಪುಸ್ತಕವು 1991ರಲ್ಲಿ ಯೂರೇಷಿಯನ್ ಪ್ರಾಂತ್ಯದ ಆ ವರ್ಷದ ಅತ್ಯುತ್ತಮ ಕೃತಿ ಎಂಬ ಹಿರಿಮೆಗೆ ಪಾತ್ರವಾಗಿ ಕಾಮನ್ವೆಲ್ತ್ ರೈಟರ್ಸ್ ಪ್ರೈಝ್ ಅನ್ನು ತನ್ನದಾಗಿಸಿಕೊಂಡಿತು. 1998ರಲ್ಲಿ ತರೂರ್ ಗೆ ಅಸೋಸಿಯೇಷನ್ ಆಫ್ ಇಂಡಿಯನ್ಸ್ ಇನ್ ಅಮೆರಿಕಾ () ಮತ್ತು ನೆಟ್ ವರ್ಕ್ ಆಫ್ ಇಂಡಿಯನ್ ಪ್ರೊಫೆಷನಲ್ಸ್ ()ನವರು ಸಾಹಿತ್ಯದಲ್ಲಿ ಶ್ರೇಷ್ಠತೆಯನ್ನು ಗುರುತಿಸಿ ನೀಡುವ ಎಕ್ಸೆಲ್ಸಿಯರ್ ಪ್ರಶಸ್ತಿ ನೀಡಲಾಯಿತು. ಅವರು ಮೇ 2000ದಲ್ಲಿ ಯೂನಿವರ್ಸಿಟಿ ಆಫ್ ಪುಗೆಟ್ ಸೌಂಡ್ ನವರು ನೀಡುವ ಡಾಕ್ಟರ್ ಆಫ್ ಲೆಟರ್ಸ್ ಇನ್ ಇಂಟರ್ ನ್ಯಾಷನಲ್ ಅಫೇರ್ಸ್ ಎಂಬ ಗೌರವ ಪದವಿಗೆ ಭಾಜನರಾದರು ಮತ್ತು ಮೇ 2008ರಲ್ಲಿ ಅವರಿಗೆ ರೋಮಾನಿಯಾದ ಯೂನಿವರ್ಸಿಟಿ ಆಫ್ ಬುಕಾರೆಸ್ಟ್ ಆನಾರಿಸ್ ಕಾಸಾ ಎಂಬ ಡಾಕ್ಟರೇಟ್ ನೀಡಿ ಗೌರವಿಸಿತು. ಜನವರಿ 1998ರಲ್ಲಿ ಸ್ವಿಟ್ಝರ್ಲ್ಯಾಂಡ್ ನ ಡಾವೋಸ್ ನಲ್ಲಿರುವ ವರ್ಲ್ಡ್ ಎಕಾನಮಿಕ್ ಫೋರಂ ತರೂರ್ "ಗ್ಲೋಬಲ್ ಲೀಡರ್ ಆಫ್ ಟುಮಾರೋ" ಎಂದು ಹೆಸರಿಸಿತು. 2004ರಲ್ಲಿ ತರೂರ್ ಗೆ ಪ್ರತಿಷ್ಠಿತ ಪ್ರವಾಸಿ ಭಾರತೀಯ ಸಮ್ಮಾನ್ ಎಂಬ ಅನಿವಾಸಿ ಭಾರತೀಯರಿಗೆ ನೀಡುವ ಮಹತ್ತರವಾದ ಪ್ರಶಸ್ತಿ ನೀಡಲಾಯಿತು ಆದರೆ ಯುನೈಟೆಡ್ ನೇಷನ್ಸ್ ನ ಕಾನೂನು ಅನಿವಾಸಿಯರು ಯಾವುದೇ ಸರ್ಕಾರೀ ಪ್ರಶಸ್ತಿ, ಗೌರವಗಳನ್ನು ಸ್ವೀಕರಿಸಬಾರದೆಂದು ತಾಕೀತು ಮಾಡಿದುದರಿಂದ ಆಗ ಅವರು ಆ ಪ್ರಶಸ್ತಿಯನ್ನು ಸ್ವೀಕರಿಸಲಿಲ್ಲ. ಯುನೈಟೆಡ್ ನೇಷನ್ಸ್ ನ ಅಧೀನ ಪ್ರಧಾನ ಕಾರ್ಯದರ್ಶಿಯ ಹುದ್ದೆಗೆ ರಾಜೀನಾಮೆ ನೀಡಿದ ನಂತರ, 2007ರಲ್ಲಿ ಅವರು ಆ ಪ್ರಶಸ್ತಿಯನ್ನು ಸ್ವೀಕರಿಸಿದರು. ಜನವರಿ 2009ರಲ್ಲಿ ತರೂರ್ ಗೆ ಝಾಕಿರ್ ಹುಸೇನ್ ಮೆಮೋರಿಯಲ್(ಸ್ಮಾರಕ ಸಂಸ್ಥೆ)ನವರ "ಪ್ರೈಡ್ ಆಫ್ ಇಂಡಿಯಾ"(ಭಾರತದ ಹೆಮ್ಮೆ)ಪ್ರಶಸ್ತಿ ನೀಡಲಾಯಿತು. ಮಾರ್ಚ್ 15 , 2009ರಂದು ಅವರಿಗೆ ಉದಯಪುರದ ಮಹಾರಾಣಾರವರು ದೇಶದ ಐಕ್ಯತೆಯ ಸೇವೆಗಾಗಿ ನೀಡುವ ಹಕೀಮ್ ಖಾನ್ ಸುರ್ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. == ಗ್ರಂಥಸೂಚಿ == ====ಕಥೆ = == = ರೈಯಾಟ್ (2001) ಷೋ ಬಿಸಿನೆಸ್ (1992) ದ ಫೈವ್ ಡಾಲರ್ ಸ್ಮೈಲ್ ಎಂಡ್ ಅದರ್ ಸ್ಟೋರೀಸ್ (1990) ದ ಗ್ರೇಟ್ ಇಂಡಿಯನ್ ನಾವೆಲ್ (1989) ==== ಕಲ್ಪಿತವಲ್ಲದ ಕಥೆಗಳು ==== ಶ್ಯಾಡೋಸ್ ಅಕ್ರಾಸ್ ದ ಪ್ಲೇಯಿಂಗ್ ಫೀಲ್ಡ್: ಸಿಕ್ಸ್ಟಿ ಇಯರ್ಸ್ ಆಫ್ ಇಂಡಿಯಾ-ಪಾಕಿಸ್ತಾನ್ ಕ್ರಿಕೆಟ್ {ಶಹರ್ಯಾರ್ ಖಾನ್ ರೊಂದಿಗೆ} (2009) ದ ಎಲಿಫೆಂಟ್, ದ ಟೈಗರ್ ಎಂಡ್ ದ ಸೆಲ್ ಫೋನ್: ರಿಫ್ಲೆಕ್ಷನ್ಸ್ ಆನ್ ಇಂಡಿಯಾ ಇನ್ ದ ಟ್ವೆಂಟಿಫಸ್ಟ್ ಸೆಂಚುರಿ (2007) ಬುಕ್ ಲೆಸ್ ಇನ ಬಾಗ್ದಾದ್ (2005) ನೆಹರೂ: ದ ಇನ್ವೆಂಶನ್ ಆಫ್ ಇಂಡಿಯಾ (2003) : (1997) ರೀಸನ್ಸ್ ಆಫ್ ಸ್ಟೇಟ್ (1982) ==== ಚಿತ್ರಸಹಿತ ಪುಸ್ತಕಗಳು ==== ಕೇರಳಾ: ಗಾಡ್ಸ್ ಓನ್ ಕಂಟ್ರಿ (2002)[ಕಲಾವಿದ ಎಂ.ಎಫ್.ಹುಸೇನ್ ರೊಡನೆ] ' (ಫ್ರೆಂಚ್) ಎಂಡ್ ಇಂಡಿಯಾ (ಇಂಗ್ಲಿಷ್) (2008) [ಛಾಯಾಗ್ರಾಹಕ ಫೆರಾಂಟೆ ಫೆರಾಂಟಿಯೊಡನೆ] == ಆಕರಗಳು == == ಹೊರಗಿನ ಕೊಂಡಿಗಳು == ಶಶಿ ತರೂರ್ ಶಶಿ ತರೂರ್ ಆನ್ ಟ್ವಿಟರ್ ಟಾಕ್ - ಶಶಿ ತರೂರ್: ವೈ ನೇಷನ್ಸ್ ಶುಡ್ ಪರ್ಸ್ಯೂ "ಸಾಫ್ಟ್" ಪವರ್ 2011-07-13 ವೇಬ್ಯಾಕ್ ಮೆಷಿನ್ ನಲ್ಲಿ. ಯುನೈಟೆಡ್ ನೇಷನ್ಸ್ ಬಯಾಗ್ರಫಿ 2012-04-13 ವೇಬ್ಯಾಕ್ ಮೆಷಿನ್ ನಲ್ಲಿ. ಸೆಂಟರ್ ಆನ್ ಪಬ್ಲಿಕ್ ಡಿಪ್ಲೊಮಸಿ ಬಯಾಗ್ರಫಿ 2009-02-25 ವೇಬ್ಯಾಕ್ ಮೆಷಿನ್ ನಲ್ಲಿ. & ತರೂರ್ ರೊಂದಿಗೆ, 22 ಜೂನ್ 2000 "ಶಶಿ ತರೂರ್ ಪ್ರಧಾನ ಕಾರ್ಯದರ್ಶಿ" ವೆಬ್ ಸೈಟ್ "ಅವೇಕನಿಂಗ್ ಇಂಡಿಯಾ:" ಶಶಿ ತರೂರ್ ರ ಮಾಸಿಕ ಅಭಿಪ್ರಾಯ/ಸಂಪಾದಕೀಯ ವಿವರಣಾ ಸರಣಿ, ಪ್ರಾಜೆಕ್ಟ್ ಸಿಂಡಿಕೇಟ್ ಗಾಗಿ ಆಡಿಯೋ: ಶಶಿ ತರೂರ್ ಬಿಬಿಸಿ ವರ್ಲ್ಡ್ ಸರ್ವೀಸ್ ಡಿಸ್ಕಷನ್ ಷೋ ನಲ್ಲಿ ಮಾತಾನಾಡುತ್ತಾ, ದ ಫೋರಮ್